ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳ ತಯಾರಿಕೆಯಲ್ಲಿ ಕಲ್ಪನೆ ಮತ್ತು ಕ್ರಿಯಾಶೀಲತೆ ಬಹುಮುಖ್ಯ ಪಾತ್ರವಹಿಸುತ್ತದೆ. ದೈನಂದಿನ ಆಗುಹೋಗುಗಳನ್ನು ವಿಭಿನ್ನವಾಗಿ ಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ಉತ್ತಮ ಕಥಾಹಂದರವನ್ನು ಹೊಂದಿದ ಕಿರುಚಿತ್ರಗಳನ್ನು ತಯಾರಿಸಲು ಸಾಧ್ಯ ಎಂದು ಉಜಿರೆ ಎಸ್.ಡಿ.ಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುನಿಲ್ ಹೆಗ್ಡೆ ಮತ್ತು ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ ಕಾರ್ಯನಿರ್ವಾಹಕ ಮಾಧವ ಹೊಳ್ಳ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ನಡೆದ ‘ವೀಡಿಯೋ ಪ್ರೊಡಕ್ಷನ್ ಮತ್ತು ಕ್ರಿಯಾತ್ಮಕ ಬರವಣಿಗೆ’ಯ ಬಗೆಗಿನ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ವಾರ್ತಾ ವಿವರಣೆಯ ತರಹೇವಾರಿ ಮಾದರಿಗಳು, ಕಿರುಚಿತ್ರದ ಕಥಾಹಂದರವನ್ನು ಪರಿಣಾಮಕಾರಿಯಾಗಿ ಬರೆಯುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನೀಡುವ ಮೂಲಕ ಸುನಿಲ್ ಹೆಗ್ಡೆ ಮಾಹಿತಿ ನೀಡಿದರೆ, ಕ್ರಿಯಾತ್ಮಕ ಬರಹ, ಡಾಕ್ಯುಮೆಂಟರಿ, ಹಾಗೂ ಕಿರುಚಿತ್ರ ನಿರ್ಮಾಣದ ಕುರಿತಾಗಿ ಮಾಧವ ಹೊಳ್ಳ ಮಾತನಾಡಿದರು. ಈ ವೇಳೆ ಆಯ್ದ ಕಿರುಚಿತ್ರಗಳ ಪ್ರದರ್ಶನವೂ ನಡೆಯಿತು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ರಾಂ, ಉಪನ್ಯಾಸಕರಾದ ಡಾ. ಶ್ರೀನಿವಾಸ ಹೊಡೆಯಾಲ, ಪ್ರಸಾದ್ ಶೆಟ್ಟಿ, ದೇವಿಶ್ರೀ ಶೆಟಿ, ಶ್ರೀಗೌರಿ ಜೋಶಿ, ಕೃಷ್ಣಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.