ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಹೆಚ್ ಆರ್ ವಿಭಾಗಕ್ಕೆ ಹೆಚ್ಚು ಬೇಡಿಕೆಯಿದ್ದು ವಿದ್ಯಾರ್ಥಿಗಳು ಈ ಅವಕಾಶಗಳತ್ತ ಗಮನ ಹರಿಸಬೇಕು. ಅದರ ಜೊತೆಗೆ ಸಂವಹನ ಕಲೆ, ಟೀಂ ವರ್ಕ್, ಆತ್ಮವಿಶ್ವಾಸ, ಆರ್ಥಿಕ ನಿರ್ವಹಣೆ ಕ್ಷೇತ್ರಗಳ ಕೌಶಲ್ಯವನ್ನು ಬೆಳಸಿಕೊಳ್ಳುವುದರಿಂದ ಉದ್ಯೋಗಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಮಂಗಳೂರು ಕೆಮಿಕಲ್ ಫರ್ಟಿಲೈಸರ್ ಲಿಮಿಟಿಡ್ ಕಂಪನಿಯ ಹೆಚ್ ಆರ್ ಜನರಲ್ ಮ್ಯಾನೆಜರ್ ಸುರೇಶ್ ತಿಳಿಸಿದರು.
ಆಳ್ವಾಸ್ ಕಾಲೇಜಿನ ಸ್ನಾತಕೊತ್ತರ ಎಮ್ ಕಾಂ ಹೆಚ್ ಆರ್ ಡಿ ವಿಭಾಗದಿಂದ ಆಯೋಜಿಸಲಾಗಿದ್ದ ‘ಹೆಚ್ ಆರ್ ಬಜೆಟಿಂಗ್’ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಹೆಚ್ ಆರ್ ಆದವರು ಬಜೆಟ್ ಮಾಡುವ ಮೊದಲು ಪ್ಲಾನಿಂಗ್ ರೂಪಿಸಬೇಕು. ಬಜೆಟ್ನಲ್ಲಿ ಎಲ್ಲ ವಿಭಾಗಕ್ಕೆ ಎಷ್ಟು ಹಣ ಮೀಸಲಿಡಬೇಕೆಂದು ಮೊದಲು ತೀರ್ಮಾನಿಸಬೇಕು. ಬಜೆಟ್ನಲ್ಲಿ ಕ್ಯಾಪಿಟಲ್ ಬಜೆಟಿಂಗ್ ಹಾಗೂ ರೆವಿನ್ಯೂ ಬಜೆಟಿಂಗ್ ಎಂಬ ಎರಡು ವಿಧಗಳಿವೆ. ಸಂಸ್ಥೆಯ ಮೂಲಸೌಕರ್ಯಗಳು ಕ್ಯಾಪಿಟಲ್ ಬಜೆಟ್ನಲ್ಲಿ ಒಳಗೊಂಡರೆ, ನೌಕರರು ಸಂಬಳ, ಟಿಎ, ಡಿಎ, ಓ.ಟಿ, ಆರೋಗ್ಯ ವಿಮಾ ಯೋಜನೆಯ ವೆಚ್ಚ ರೆವಿನ್ಯೂ ಬಜೆಟ್ನಲ್ಲಿ ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರುವ ಮೊದಲು ಸಂದರ್ಶನ ಕಲೆ, ಡಿಜಿಟಲ್ ಕೌಶಲ್ಯಗಳನ್ನು ಕರಗತಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಮ್.ಕಾಂ.ಹೆಚ್.ಆರ್.ಡಿ ವಿಭಾಗದ ಮುಖ್ಯಸ್ಥೆ ಶಾಝೀಯ ಸೈಯದ್ ಹಾಗೂ ಮತ್ತಿತ್ತರ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.