ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಪದವಿ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ನಿರ್ವಹಣೆ ವಿಭಾಗದ ವತಿಯಿಂದ `ಜೀವನ ಕೌಶಲ್ಯ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಗಾರವನ್ನುದ್ದೇಶಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೆಂಜಿಗ್ ಟ್ರಸ್ಟಿ ವಿವೇಕ್ ಆಳ್ವ, ಜೀವನ ಕೌಶಲ್ಯ ಎಂಬುದು ಇನ್ನೊಬ್ಬರಿಂದ ಹೇಳಿಸಿಕೊಂಡು ಕಲಿಯುವಂತದ್ದಲ್ಲ. ಅದನ್ನು ನಮಗೆ ನಾವೇ ಅಳವಡಿಸಿಕೊಳ್ಳಬೇಕು. ಯಾವುದೇ ಕೆಲಸವನ್ನು ದಿನನಿತ್ಯ ಜೀವನದಲ್ಲಿ ಅಭ್ಯಸಿಸದಿದ್ದರೆ ನಾವು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಸಾಧ್ಯವಿಲ್ಲ ಎಂದರು.
ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ಪ್ರಾಧ್ಯಾಪಕ ಡಾ. ರಾಬರ್ಟ್ ಕ್ಲೈವ್ ಮಾತನಾಡಿ ನಿಮ್ಮ ಪ್ರತಿ ಕೆಲಸಗಳು ನಿಮ್ಮ ಪರಿಶುದ್ದತೆಯನ್ನು ಪ್ರತಿ ಬಿಂಬಿಸುತ್ತವೆ. ಜೀವನದಲ್ಲಿ ಎಷ್ಟೇ ಕಷ್ಟಬಂದರೂ ಅದನ್ನು ಎದುರಿಸುವ ಶಕ್ತಿ, ಛಲ ನಿಮ್ಮಲ್ಲಿರಬೇಕು. ಜೀವನದಲ್ಲಿ ಎಲ್ಲವೂ ಅಷ್ಟು ಸುಲಭವಾಗಿ ಸಿಗುವಂತದಲ್ಲ ಕಷ್ಟಪಟ್ಟರೆ ಎಲ್ಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದರು. ನಿಮ್ಮ ಜೀವನದ ಪ್ರತಿ ಒಂದು ಕ್ಷಣವು ನಿಮಗೆ ಮಹತ್ವವನ್ನು ನಿಡುವಂತದ್ದಾಗಿರಬೇಕು. ನಾವು ಯಾವುದಕ್ಕೂ ಎರಡನೇ ಅವಕಾಶ ಸಿಗಲಿ ಎಂದು ಕಾಯಬಾರದು. ಒಮ್ಮೆಲೆ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕೆಂದು ನಮಗೆ ಚೆನ್ನಾಗಿ ತಿಳಿದಿರಬೇಕು. ನಮ್ಮ ಇಷ್ಟಗಳ ಬಗ್ಗೆ ಯೋಚನೆ ಮಾಡುವುದು ಹಾಗೂ ಜೀವನದ ಮೌಲ್ಯಗಳ ಬಗ್ಗೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಮ್ಮ ಸಂಕುಚಿತ ಭಾವನೆಯಿಂದ ನಾವು ಹೊರಬಂದು ಪ್ರಪಂಚದ ಜೊತೆ ಬೆರೆತುಕೊಳ್ಳಬೇಕು. ನಮ್ಮ ಜೀವನದಲ್ಲಿ ತಾಳ್ಮೆ, ಯೋಚನೆ ಮತ್ತು ಸಾಮಾನ್ಯ ಜ್ಞಾನ ಇರಲೇಬೇಕು. ನಾವು ಚಿಕ್ಕ ಚಿಕ್ಕ ವಿಷಯಗಳನ್ನು ಸಹ ಬಹಳ ಕಷ್ಟಕರ ಎಂದು ಭಾವಿಸಿ ಒತ್ತಡವನ್ನು ಮೈಗೂಡಿಸಿಕೊಂಡು ಚಿಂತೆ ಮಾಡಲು ಶುರುಮಾಡುತ್ತೇವೆ ಆದರೆ ಒಮ್ಮೆ ಕುಳಿತು ನಿಧಾನವಾಗಿ ಯೋಚಿಸಿದರೆ ಯಾವುದು ಕಷ್ಟಕರವಲ್ಲ ಎಂದು ಅಭಿಪ್ರಾಯಪಟ್ಟರು. ಈ ಸಂಧರ್ಭದಲ್ಲಿ ಜೀವನ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.
ಈ ಕಾರ್ಯಗಾರದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್ ಮತ್ತು ವಿಭಾಗದ ಡೀನ್ ಸುರೇಖಾ ರಾವ್ ಹಾಗೂ ಕಾರ್ಯಕ್ರಮ ಸಂಯೋಜಕರು ಅಂಬಿಕಾ ಕೆ ಮತ್ತಿತರು ಉಪಸ್ಥಿತರಿದ್ದರು. ಈ ಕಾರ್ಯಗಾರವನ್ನು ಮುತ್ತಮ್ಮ ಪಿಜಿ ಸ್ವಾಗತಿಸಿ, ದೀಕ್ಷಾ ವಂದಿಸಿ ಹಾಗೂ ಅಲಿಶಾ ನಿರೂಪಿಸಿದರು.