ವಿದ್ಯಾಗಿರಿ: ಹಳೆತನ ಹಾಗೂ ಹೊಸತನದ ನಡುವೆ ಸಾಮ್ಯತೆ ಕಳೆದುಕೊಂಡಾಗ ಸಮಾಜದಲ್ಲಿ ವ್ಯವಸ್ಥೆಗಳು ಸ್ವಾಸ್ಥ್ಯ ಕಳೆದುಕೊಳ್ಳುತ್ತದೆ. ಅವು ಕುಟುಂಬ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹಿರಿಯ ರಂಗಕರ್ಮಿ, ನಿರ್ದೇಶಕ ಎಸ್ ಎನ್ ಸೇತುರಾಮ್ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ ತಿಂಗಳ ಚಿಂತನ ಕಾರ್ಯಕ್ರಮದಲ್ಲಿ ಭ್ರಷ್ಟ ಸಮಾಜ; ಕುಟುಂಬ ವ್ಯವಸ್ಥೆಯ ಮೇಲೆ ಪರಿಣಾಮ ಎಂಬ ವಿಷಯದ ಕುರಿತು ಮಾತನಾಡಿದರು.
ಸಮಾಜದಲ್ಲಿನ ವ್ಯವಸ್ಥೆ ಮೊದಲು ಬದಲಾಗಬೇಕು. ಆಗ ಮಾತ್ರ ಸಮಾಜ ಸ್ವಾಸ್ಥ್ಯ ಕಾಪಾಡಿಕೊಳ್ಳುವುದಕ್ಕೆ ಸಾಧ್ಯ. ಇಲ್ಲವಾದಲ್ಲಿ ಸಮಾಜದ ಭ್ರಷ್ಟತೆ ಕುಟುಂಬದ ಮೇಲೆ ಪರಿಣಾಮ ಬೀರಿ ಕುಟುಂಬ ಒಡೆಯುವುದಕ್ಕೂ ಕಾರಣವಾಗಬಹುದು. ಯಾವಾಗ ಮನುಷ್ಯ ಸುಲಭದ ದಾರಿಯನ್ನು ಹುಡುಕಲು ಪ್ರಾರಂಬಿಸುತ್ತಾನೋ ಅಲ್ಲಿಂದಲೇ ಸಮಾಜದಲ್ಲಿ ಭ್ರಷ್ಟಾಚಾರ ಆರಂಭವಾಗುತ್ತದೆ. ಸಮಾಜವನ್ನು ಕೆಡಿಸುತ್ತಿರುವ ವ್ಯವಸ್ಥೆ ಮತ್ತು ಅಧಿಕಾರಶಾಹಿ ಧೋರಣೆಯನ್ನು ಪ್ರಶ್ನಿಸುವಂತಹ ಮನಸ್ಥಿತಿಯನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಸಭಾ ಕಾರ್ಯಕ್ರಮದ ಮುನ್ನ, ಜೀವನ್ ರಾಮ್ ಸುಳ್ಯ ರಚಿಸಿ ನಿರ್ದೇಶಿಸಿರುವ ‘ಅಭಿವೃದ್ಧಿ’ ಕಿರು ನಾಟಕವನ್ನು ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.