ಮೂಡುಬಿದಿರೆ: ನಮ್ಮ ಸದ್ವಿಚಾರಗಳನ್ನು ಹಾಗೂ ಸ್ಥಳೀಯ ಮಾಹಿತಿಗಳನ್ನು ಪ್ರಪಂಚಕ್ಕೆ ತಲುಪಿಸಲು ಇರುವ ಅತ್ಯುತ್ತಮ ವೇದಿಕೆಯೆ ಬ್ಲಾಗಗಳು. ಬ್ಲಾಗ್ ಬರಹಗಾರರಿಗೆ ವಿಷಯ ಜ್ಞಾನ, ಭಾಷೆ ಮತ್ತು ಉದ್ದೇಶದ ಅರಿವಿರಬೇಕು. ಬ್ಲಾಗ್ಗಳನ್ನು ಪ್ರಾರಂಭಿಸಿದ ನಂತರ ಬರವಣಿಗೆ ನಿರಂತರವಾಗಿರಬೇಕು ಎಂದು ಮಂಗಳೂರಿನ ಇನ್ವಿನ್ಸಿವ್ ಕ್ರಿಯೇಟಿವ್ಸ್ನ ಸಹ ವ್ಯವಸ್ಥಾಪಕರಾದ ಶ್ರೀನಿವಾಸ ಪೆಜತ್ತಾಯ ಹೇಳಿದರು.ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ”ಬ್ಲಾಗಿಂಗ್ ಮತ್ತು ಬರವಣಿಗೆ” ಕುರಿತಾದ ವಿಶೇಷ ಉಪನ್ಯಾಸ ಹಾಗೂ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಜ್ಞಾನ, ಸಾಹಿತ್ಯ, ಕಲೆ, ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅಭಿಪ್ರಾಯಗಳನ್ನು ಒದುಗರಿಗೆ ತಿಳಿಸಲು ಬ್ಲಾಗಗಳು ಉತ್ತಮ ವೇದಿಕೆಯಾಗಿವೆ. ಬ್ಲಾಗ್ ಬರವಣಿಗೆಯ ಮೂಲಕ ತಮ್ಮ ಸ್ವ-ಅಭಿರುಚಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ವಿಫುಲ ಸಂಪಾದನೆಯು ಸಾಧ್ಯ ಎಂದು ತಿಳಿಸಿದರು. ಪ್ರವಾಸೋದ್ಯಮ ಮತ್ತು ಆಹಾರ ತಯಾರಿಕೆಯಂತಹ ಅನೇಕ ವಿಭಾಗಗಳ ಬಗ್ಗೆ ಲೇಖನಗಳನ್ನು ಬರೆಯುವ ಮತ್ತು ಛಾಯಚಿತ್ರಗಳನ್ನು ಅಪ್ಲೋಡ್ ಮಾಡುವ ವಿಧಾನವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯಕುಮಾರ್, ಉಪನ್ಯಾಸಕಿ ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಸ್ನಿಫಾ ವಂದಿಸಿದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.