ಆಳ್ವಾಸ್‍ನಲ್ಲಿ ಅತಿಥಿ ಉಪನ್ಯಾಸ ‘’ಸುಸ್ಥಿರ ಅಭಿವೃದ್ದಿಯತ್ತ ಭಾರತ’’

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿವಮೊಗ್ಗ ಡಿ.ವಿ.ಎಸ್ ಆಟ್ರ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಕೆ ಕುಮಾರಸ್ವಾಮಿ “ಯಾವುದೇ ಒಂದು ವ್ಯವಸ್ಥೆ ತಪ್ಪನ್ನು ಮಾಡಿದಾಗ ಮಾತ್ರ ಅದರ ಅಸ್ಥಿತ್ವದ ನೆನಪಾಗುವುದು. ಜನಸಾಮಾನ್ಯರಲ್ಲಿ ಆರ್ಥಿಕ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಕಲ್ಪನೆ ಇದ್ದು, ಆದರೆ ವಾಸ್ತವದಲ್ಲಿ ಪರಿಸರ ಮತ್ತು ಸಮಾಜದ ಬೆಳವಣಿಗೆಯೂ ಸಹ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡುತ್ತದೆ ಎಂಬ ಸತ್ಯಾಂಶ ತಿಳಿಯದೇ ಇರುವುದು ದುರಂತ ಎಂದರು. ಇಂದಿನ ಯುವಜನತೆ ತಮಗೆ ದೊರೆತಿರುವ ಸಂಪನ್ಮೂಲದಿಂದ ಭವಿಷ್ಯದ ಒಳಿತಿಗಾಗಿ ಉಳಿತಾಯ ಮಾಡಿಕೊಂಡು ತಮ್ಮ ಮೂಲಭೂತ ಬೇಡಿಕೆಯನ್ನು ಪೂರೈಸಿಕೊಂಡಾಗ ಅದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯಜೀವನ್‍ರಾಮ್, ಈಗಿನ ಶಿಕ್ಷಣ ವ್ಯವಸ್ಥೆಯು ಪ್ರಾಯೋಗಿಕ ಶಿಕ್ಷಣದ ಬದಲಾಗಿ ಪಠ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಅವಲಂಬಿತವಾಗಿದೆ. ಸುಸ್ಥಿರ ಅಭಿವೃದ್ಧಿಯು ಆರ್ಥಿಕ ಅಭಿವೃದ್ಧಿ ಮಿಗಿಲಾಗಿ ಪರಿಸರದ ಅಭಿವೃದ್ಧಿಯತ್ತ ಗಮನಹರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ರವಿಂದ್ರ ಎಮ್.ಕೆ ಉಪಸ್ಥಿತರಿದ್ದರು. ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.