ಮೂಡಬಿದಿರೆ: ತುಳು ನಾಡು ಅಗಾಧ ಚರಿತ್ರೆ ಹಾಗೂ ಸಂಸ್ಕೃತಿವನ್ನು ಹೊಂದಿರುವ ನಾಡು. ಈ ಸಂಸ್ಕೃತಿಗೆ ಹರಪ್ಪ ನಾಗರೀಕತೆಗಿಂತಲೂ ಪ್ರಾಚೀನವಾದ ಇತಿಹಾಸವಿದೆ ಎಂದು ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಪಕ ಪ್ರೋ ಟಿ ಮುರುಗೇಶಿ ತಿಳಿದರು.ಅವರು ಆಳ್ವಾಸ್ ಪದವಿ ಕಾಲೇಜಿನ ಇತಿಹಾಸ ವಿಭಾಗ ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ತುಳುನಾಡ ಪ್ರಾಘ್ಯ ಇತಿಹಾಸದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುನಾಡು ಶಿಲ್ಪಕಲೆಗಳ ಬೀಡಾಗಿದ್ದು, ಇಲ್ಲಿನ ಕಲೆ ಸಂಸ್ಕೃತಿ ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಪಡೆದಿವೆ. ಉಡುಪಿಯ ಬುದ್ದನಜಿಡ್ಡುವಿನಲ್ಲಿ ಕಾಣಸಿಗುವ ಅನೇಕ ಶಿಲ್ಪಕಲೆಗಳು ಹರಪ್ಪ ನಾಗರೀಕತೆಯನ್ನೆ ಹೋಲುವಂತವು ಎಂಬುದಾಗಿ ಅಧ್ಯಯನದಿಂದ ತಿಳಿದು ಬಂದಿದೆ. ತೂತು ಕಲ್ಲು, ಸಮಾಧಿ ಕಲ್ಲು ಹಾಗೂ ಕಲ್ಲಿನಿಂದ ಮಾಡಿದ ಆಯುಧಗಳು ಈ ಭಾಗದಲ್ಲಿ ಹೆಚ್ಚಿನ ಜಾಗದಲ್ಲಿ ಕಾಣಸಿಗುತ್ತವೆ ಎಂದು ತಿಳಿಸಿದರು. ಪ್ರತಿಯೊಬ್ಬರು ಮೊದಲು, ತಾವು ನಿಂತ ಜಾಗದ ಇತಿಹಾಸವನ್ನು ಅರಿಯಲು ಪ್ರಯತ್ನಿಸಬೇಕು, ಆ ಮೂಲಕ ಸಮಗ್ರ ಭಾರತದ ಇತಿಹಾಸವನ್ನು ತಿಳಿಯಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ ಕುರಿಯನ್ ತುಳು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ನಡೆಸಬೇಕು, ಆ ಮೂಲಕ ಒಂದು ಸಂಸ್ಕೃತಿಯ ಸಾಮೀಪ್ಯದ ಅವಲೋಕನ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅನೀಶಾಡಿ ಮೆಲ್ಲೋ ಸ್ವಾಗತಿಸಿ, ಪೂಜಾ ಗುಡಸಿ ವಂದಿಸಿ, ಸುಮಯ್ಯಾ ಪರ್ವಿನ್ ನಿರೂಪಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಅಶೋಕ ಆರ್ ಡಿಸೋಜಾ, ಉಪನ್ಯಾಸಕ ಡಾ ಸನ್ಮತಿ ಕುಮಾರ್, ಇತಿಹಾಸ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್, ಕಾರ್ಯದರ್ಶಿ ಸಮನ್ ಸಯ್ಯದ್ ಉಪಸ್ಥಿತರಿದ್ದರು.