ವಿದ್ಯಾಗಿರಿ: ಭಾವನೆಗಳು ಯೋಚನೆಗಳಾಗಿ, ಯೋಚನೆಗಳು ನುಡಿಯಾಗಿ ರೂಪುಗೊಂಡಾಗ ಕಾವ್ಯ ಸೃಷ್ಠಿಯಾಗುತ್ತದೆ. ಈ ರೀತಿಯ ಕಾವ್ಯಗಳು ವ್ಯವಸ್ಥಿತವಾಗಿ ಜೋಡಣೆಯಾದಾಗ ಸಾಹಿತ್ಯವಾಗುತ್ತದೆ ಎಂದು ಹಿರಿಯ ಇಂಗ್ಲೀಷ್ ಪ್ರಾಧ್ಯಾಪಕ ಹಾಗೂ ಎಸ್ಡಿಎಮ್ ಸ್ನಾತಕೋತ್ತರ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ| ಎಚ್ ಮಾಧವ ಭಟ್ ತಿಳಿಸಿದರು.
ಆಳ್ವಾಸ್ ಕಾಲೇಜಿನ ಇಂಗ್ಲೀಷ್ ವಿಭಾಗದ ಸಾಹಿತ್ಯ ಸಂಘ `ಗ್ಲಿಸನ್” ನ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವೆನ್ನುವುದು ನಾಲ್ಕು ಗೋಡೆಗಳ ಮಧ್ಯವಿರದೆ, ಹೊರ ಪ್ರಪಂಚವನ್ನು ತಿಳಿದುಕೊಳ್ಳುವಂತಿರಬೇಕು. ಪ್ರತಿಯೊಬ್ಬ ಕವಿಯು ಸಾಹಿತ್ಯವನ್ನು ತನ್ನ ದೃಷ್ಠಿಕೋನದಲ್ಲಿ ನೋಡದೆ, ಸ್ವತಃ ತನ್ನನ್ನು ಸಾಹಿತ್ಯದ ವಸ್ತುವಾಗಿ ಪರಿಗಣಿಸಬೇಕು ಎಂದು ಹೇಳಿದರು. ನಂತರ ಶೇಕ್ಸಫಿಯರ್ ಸಾಹಿತ್ಯದ ಬಗ್ಗೆ ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಅನುಭವ ಹಾಗೂ ಚಿಂತನೆಗಳು ಸಾಹಿತ್ಯದ ಹುಟ್ಟಿಗೆ ಕಾರಣ. ಪ್ರತಿಯೊಂದು ವಿದ್ಯಾರ್ಥಿಯು ಉತ್ತಮ ಯೋಚನೆಗಳನ್ನು ಬೆಳೆಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ರಚಿಸಿದ ಇಂಗ್ಲೀಷ್ ಕವನಸಂಕಲನದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್, ಭಾರತೀಯ ಭಾಷಾ ವಿಭಾಗದ ಮುಖ್ಯಸ್ಥ ಡಾ. ರಾಜೀವ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಮಚ್ಚೇಂದ್ರ, ಉಪನ್ಯಾಸಕರಾದ ಭಾಸ್ಕರ್ ಹೆಬ್ಬಾರ್ ಹಾಗೂ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮರಿಯಮ್ ಸ್ವಾಗತಿಸಿದರು. ಸೊನಿಯಾ ಸಲಿ ಕಾರ್ಯಕ್ರಮ ನಿರೂಪಿಸಿದರು.