ವಿದ್ಯಾಗಿರಿ: ಮಾತು ಮತ್ತು ಓದು ಉತ್ತಮ ಸಂವಹನಕ್ಕೆ ಔಷಧಿ ಎಂದು ಮಂಗಳೂರು ಆಕಾಶವಾಣಿಯ ಕಾರ್ಯ ನಿರ್ವಹಣಾಧಿಕಾರಿ ದೇವು ಹನೇಹಳ್ಳಿ ಹೇಳಿದರು.
ಆಳ್ವಾಸ್ ಕಾಲೇಜಿನ ಕನ್ನಡ ಸಂಸ್ಕ್ರತಿ ಅಧ್ಯಯನ ಕೇಂದ್ರದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ನಡೆದ ‘ಒಂದು ಓದಿನ ಸುತ್ತ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಓದು ಉದ್ಯೋಗ ಸಂಪಾದನೆಯ ವಸ್ತು ಅಲ್ಲ. ಅದು ಮನುಷ್ಯನ ಅಭಿವ್ಯಕ್ತಿಯ ಸೂಚಕ. ಮಾನವನ ಭಾವನೆಯ ಪ್ರತಿರೂಪವೇ ಓದು. ಇಂದು ಜಗತ್ತಿನ ಪರಿವೇ ಇಲ್ಲದೆ ತಾಂತ್ರಿಕತೆಯಲ್ಲಿ ನಾವೆಲ್ಲ ಮುಳುಗಿಹೋಗಿದ್ದೇವೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಮಾತನಾಡುವ ಮತ್ತು ಓದುವ ಕಲೆಯನ್ನು ಮರೆತು ಹೋಗುತ್ತಿದ್ದಾನೆ. ನಿರ್ಜೀವ ವಸ್ತುವಿನಂತೆ ಬದುಕುತ್ತಿದ್ದಾನೆ. ಓದು ಮತ್ತು ಬರಹ ಅತಿ ಸರಳವಾಗಿ ಸಿಗುವ ಜ್ಞಾನದ ದಿವ್ಯ ಔಷಧ. ಆದ್ದರಿಂದ, ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕ ಡಾ ಕೃಷ್ಣರಾಜ ಕರಬ, ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ರಕ್ಷಿತ್ ನಿರೂಪಿಸಿ, ರಚಿನಾ ವಂದಿಸಿದರು.