ಮೂಡುಬಿದಿರೆ: ಲಿಂಗ ಸಮಾನತೆ ಎಂದರೆ ಮಹಿಳೆಯರು ಪುರುಷರಂತೆ ಬದುಕುವುದಲ್ಲ. ಪುರುಷರು ಮತ್ತು ಮಹಿಳೆಯರು ತಮ್ಮ ನಡುವಿನ ವ್ಯತ್ಯಾಸವನ್ನು ತಿಳಿದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮತು ಗೌರವದಿಂದ ಕಾಣುವುದು ಎಂದು ಸಾಮಾಜಿಕ ಕಾರ್ಯಕರ್ತೆ ಪದ್ಮಶ್ರೀ ಡಾ. ಸುನೀತಕೃಷ್ಣನ್ ಹೇಳಿದರು.
ಆಳ್ವಾಸ್ ಕಾಲೇಜಿನಲ್ಲಿ ಅಂತರಾಷ್ರ್ಟೀಯ ಹೆಣ್ಣು ಮಗು ದಿನದ ಅಂಗವಾಗಿ ಐ.ಕ್ಯೂ.ಎ.ಸಿ ಮತ್ತು ಮಹಿಳಾ ಅಭಿವೃದ್ಧಿ ಘಟಕದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಲಿಂಗತ್ವ ಸಮಾನತೆ ಮತ್ತು ಮಾನವ ಸಾಗಣಿ ತಡೆಗಟ್ಟುವಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಿದ್ದು ಭ್ರೂಣ ಹತ್ಯೆ ಪ್ರಮಾಣ ಹೆಚ್ಚಾಗಿದೆಅದರಲ್ಲೂ ವಿದ್ಯಾವಂತರು ಈ ಕೃತ್ಯದಲ್ಲಿ ಹೆಚ್ಚಾಗಿ ತೊಡಗಿರುವುದು ವಿಷಾದಕರ ಸಂಗತಿಯಾಗಿದೆ. ಪುರುಷರು ಮಹಿಳೆಯರ ಮೇಲೆ ನಡೆಸುವ ದೈಹಿಕ ಹಲ್ಲೆ, ಮಾನಸಿಕ ಕಿರುಕುಳಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಲೈಂಗಿಕ ದೌರ್ಜನ್ಯದ ವಿರುದ್ದ ಹೆಣ್ಣು ಮಕ್ಕಳು ಧ್ವನಿ ಎತ್ತಬೇಕು. ಸಮಾಜಕ್ಕೆ ಮತ್ತು ಕುಟುಂಬದ ಗೌರವಕ್ಕೆ ಹೆದರಿ ಅವರ ಜೀವನಗಳನ್ನು ಹಾಳು ಮಾಡಿಕೊಳ್ಳಬಾರದು. ಅವರ ಮೌನ ಅಪರಾಧಕ್ಕೆ ಪ್ರೇರೆಪಿಸಿದಂತೆ ಎಂದು ವಿದ್ಯಾರ್ಥಿಗಳಲ್ಲಿ ಅಪರಾಧದ ವಿರುದ್ಧಜಾಗೃತಿ ಮೂಡಿಸಿದರು.ಮಹಿಳೆಯರು ಮೊದಲು ತಮ್ಮನ್ನು ತಾವು ಸಬಲಗೊಳಿಸಿಕೊಂಡು ನಂತರ ಅದನ್ನು ಸಮಾಜದ ಮುಂದೆ ಸದೃಢಪಡಿಸಬೇಕು ಅದು ನಿಜವಾದ ಮಹಿಳಾ ಸಬಲೀಕರಣ ಎಂದು ವಿದ್ಯಾರ್ಥಿಗಳಿಗೆ ಲಿಂಗತ್ವ ಸಮಾನತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಗುಲಾಬಿ ಬಿಳಿಮಲೆ ಮಾತನಾಡಿ ಕಳೆದ ಎಂಬತ್ತು ವರ್ಷದಿಂದ ಭಾರತದಲ್ಲಿ ಹಲವಾರು ಕ್ಷೇತ್ರದಲ್ಲಿ ಬದಲಾವಣೆ ಆಗಿದ್ದರೂ ಸಹ ಹೆಣ್ಣು ಮಕ್ಕಳನ್ನು ನೋಡುವ ಸ್ಥಿತಿ ಇನ್ನೂ ಬದಲಾಗಿಲ್ಲ. ದೇಶದಲ್ಲಿ ಹೆಣ್ಣು ಮತ್ತು ಗಂಡಿಗೆ ಸೀಮಿತ ಗುಣವನ್ನು ನಿಗದಿಪಡಿಸಿದ್ದಾರೆ. ಇದರ ಹೊರತು ಮನುಷ್ಯ ಗುಣದ ಮರು ಮೌಲ್ಯಮಾಪನವಾಗಿ ಉತ್ತಮ ಪ್ರಜೆಗಳ ನಿರ್ಮಾಣವಾಗಬೇಕು. ಹೀಗೆ ಉಂಟಾದ ಪ್ರಜೆಗಳಿಂದ ಹೆಣ್ಣುಮಕ್ಕಳ ಸಬಲೀಕರಣ ಸಾಧ್ಯಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, `ಇಂದು ಮಾನವ ಸಾಗಾಣಿಕೆದೇಶದಲ್ಲಿದೊಡ್ಡ ವ್ಯಾಪಾರಗಳಲ್ಲಿ ಒಂದಾಗಿದೆ.ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಸಹ ಮನುಷ್ಯರು ಎಂಬ ಕನಿಷ್ಠ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ ಅಭಿಯಾನದ ಸಂಯೋಜಕಿ ಶೆರ್ಲಿ.ಟಿ.ಬಾಬು ಹಾಗೂ ಮಹಿಳಾ ಅಭಿವೃದ್ಧಿ ಘಟಕದ ಸಂಯೋಜಕಿ ಶಾಝಿಯಾ ಸಯ್ಯಾದ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶರಣ್ಯ ರಾವ್ ನಿರೂಪಿಸಿದರು.