ವಿದ್ಯಾಗಿರಿ: ಪ್ರತಿಯೊಂದು ವಿದ್ಯಾರ್ಥಿ ಸಂಘಟನೆಯು ನಿರ್ದಿಷ್ಟ ಧ್ಯೇಯವನ್ನು ಹೊಂದಿದ್ದು, ಈ ಧ್ಯೇಯೋದ್ದೇಶಗಳು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ಉಪನ್ಯಾಸಕಿ ಡಾ. ವಂದನಾ ಜೈನ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ವತಿಯಿಂದ ನಡೆದ ವಿದ್ಯಾರ್ಥಿ ಸಂಘಟನೆ ತನು-ಮನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಉಪನ್ಯಾಸಕ ವರ್ಗದವರಲ್ಲಿ ಧನಾತ್ಮಕ ಚಿಂತನೆಗಳನ್ನು ಮೂಡಿಸುವಲ್ಲಿ ಸಹಕಾರಿಯಾಗಿದೆ. ಇಂತಹ ಸಂಘಟನೆಗಳ ಮೂಲಕ ಮಾನವ ಸಂಬಂಧ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಉತ್ತೇಜನವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿ ಸಂಘಟನೆಯ ಕಾರ್ಯ ಕೇವಲ ಸಂಘಟನೆಯ ಸದಸ್ಯರದ್ದಲ್ಲ, ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿರಬೇಕು ಎಂದು ಅವರು ತಿಳಿಸಿದರು.
ಇಂದು ಪ್ರತಿಯೊಬ್ಬರೂ ನಿರ್ದಿಷ್ಟ ಚೌಕಟ್ಟಿನಲ್ಲಿ ಬದುಕುತ್ತಿದ್ದು, ಅದರೊಳಗೆ ಚಿಂತಿಸುತ್ತಿದ್ದರೆ. ಆ ಚೌಕಟ್ಟಿನಿಂದ ಹೊರಬಂದು ವಿಶಾಲಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಾರ್ಯವನ್ನು ಜವಾಬ್ದಾರಿಯಿಂದ ವಹಿಸಿಕೊಂಡಾಗ ಮಾತ್ರ ಅದರಲ್ಲಿ ಯಶಸ್ವಿಯಾಗಲು ಸಾದ್ಯ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಯುವ ಸಮುದಾಯದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ ಎಂದು ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ದೀಪಾ ಕೊಠಾರಿ ತಿಳಿಸದರು.
ಈ ಕಾರ್ಯಕ್ರಮದಲ್ಲಿ ಮನಃಶಾಸ್ತ್ರ ವಿಭಾಗದ ಉಪನ್ಯಾಸಕರಾದ ರಾಘವೇಂದ್ರ, ರೋಜಾ ಹಾಗೂ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವರ್ಷ, ಕಾರ್ಯದರ್ಶಿ ಜಿನ್ಸಿನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಬಾನಾ ಕಾರ್ಯಕ್ರಮ ನಿರೂಪಿಸಿದರು.